ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನಾಯಕ ಸಮಾಜದ ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಾಲೂಕಿನ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಇತ್ತೀಚೆಗೆ ಭೇಟಿ ಮಾಡಿ ಅಭಿನಂದಿಸಿದರು.
ಅನಿಲ್ ಚಿಕ್ಕಮಾದು ಎರಡನೇ ಬಾರಿಗೆ ಶಾಸಕರಾಗಿ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕೆಂದು ಚಿಕ್ಕದೇವಮ್ಮತಾಯಿ ಬೆಟ್ಟದಲ್ಲಿ ಹರಕೆ ಹೊರಲಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಆಗಿದೆ. ತಾಲೂಕಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅನುದಾನ ನೀಡಬೇಕು. ಜತೆಗೆ ಚಿಕ್ಕದೇವಮ್ಮನ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವಂತೆ ಸಿಎಂ ಬಳಿ ಮನವಿ ಮಾಡಲಾಗಿದೆ ಎಂದು ಶಂಭುಲಿಂಗನಾಯಕ ತಿಳಿಸಿದರು.
ಮನವಿಗೆ ಸ್ಪಂದಿಸಿಸಿರುವ ಮುಖ್ಯಮಂತ್ರಿಗಳು, ತಾವೇ ಚಿಕ್ಕದೇವಮ್ಮನ ಬೆಟ್ಟಕ್ಕೆ ಬರುವುದಾಗಿ ತಿಳಿಸಿದ್ದಾರೆ. ಬೆಟ್ಟದ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಜಿಪಂ ಸದಸ್ಯ ಚಿಕ್ಕವೀರ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮುಖಂಡರಾದ ಬೀರ್ವಾಳ್ ಬಸವರಾಜು, ಬಿ.ವಿ.ಬಸವರಾಜು, ಹೂವಿನಕೊಳ ಸಿದ್ದರಾಜು, ಅಗತ್ತೂರು ಅಂಕಪ್ಪ, ಹಾಜರಿದ್ದರು.