ಹುಲಸೂರು: ಆಧುನಿಕತೆ, ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದ ಮಧ್ಯೆಯೂ ನಮ್ಮತನ ಉಳಿಸಿಕೊಳ್ಳಬೇಕಿದೆ. ನಮ್ಮ ಸಾಹಿತ್ಯ, ಚರಿತ್ರೆ, ಇತಿಹಾಸ, ಸಂಸ್ಕೃತಿಯನ್ನು ಅರಿಯಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಜರೂರಿಯಾಗಿದೆ ಎಂದು ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹೇಳಿದರು.

ಬೇಲೂರಿನಲ್ಲಿ ಉರಿಲಿಂಗಪೆದ್ದಿ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಶನಿವಾರ ಆಯೋಜಿಸಿದ್ದ ಉರಿಲಿಂಗ ಪೆದ್ದಿ ಉತ್ಸವ, ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ೫೬ನೇ ಪುಣ್ಯ ಸ್ವರಣೋತ್ಸವ ಹಾಗೂ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿ ಧರ್ಮ, ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಕೀರ್ತನೆ, ತತ್ವಪದ, ಜಾನಪದ ಸಾಹಿತ್ಯ ಸಂಸ್ಕೃತಿ ಹೀಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ಬಸವಣ್ಣನವರ ಪುಣ್ಯಕ್ಷೇತ್ರ ಕಲ್ಯಾಣ. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ರಚನೆಗೊಂಡು ವಿಶ್ವಕ್ಕೆ ದೊಡ್ಡ ಕ್ರಾಂತಿ ನೀಡಿದ, ಕಾಯಕ-ದಾಸೋಹ, ಸಮಾನತೆ, ಭ್ರಾತೃತ್ವವನ್ನು ತಂದುಕೊಟ್ಟ ನೆಲ ಇದಾಗಿದೆ. ಅನುಭವ ಮಂಟಪದಲ್ಲಿ ಅಂದು ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ವಚನಗಳನ್ನು ರಚಿಸಿ ಬಹುದೊಡ್ಡ ಕ್ರಾಂತಿ ಮಾಡಿ ಈ ನೆಲದ ಅಸ್ಮಿತೆಗಾಗಿ ಸಾಮಾಜಿಕ ಚಳವಳಿಗೆ ಭದ್ರವಾದ ಬುನಾದಿ ಹಾಕಿದ್ದರು ಎಂದು ಸ್ಮರಿಸಿದರು.
ಶರಣ ಉರಿಲಿಂಗಪೆದ್ದಿ ಅನೇಕ ಮಠಗಳನ್ನು ಸ್ಥಾಪಿಸಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದು, ಅವರ ಹೆಸರಿನಲ್ಲಿ ಉರಿಲಿಂಗಪೆದ್ದಿ ಉತ್ಸವ ಮತ್ತು ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ಸ್ಮರಣೋತ್ಸವ ಮಾಡುವುದು ಅವಿಸ್ಮರಣೀಯ ಕಾರ್ಯ ಎಂದು ಶ್ಲಾಘಿಸಿದರು.
ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ ೨೦೦೯ರಿಂದ ಇದುವರೆಗೆ ೧೭ ಸಮ್ಮೇಳನಗಳನ್ನು ಸಂಘಟಿಸಿ ದಾಖಲೆ ನಿರ್ಮಿಸಿದ್ದಾರೆ. ಸಾಹಿತ್ಯ, ಸಾಹಿತಿಗಳನ್ನು ಬೆಳೆಸಬೇಕು ಎಂಬ ಉದ್ಧೇಶದಿಂದ ಡಾ.ಗವಿಸಿದ್ಧಪ್ಪ ಪಾಟೀಲ್ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದಲ್ಲೀಗ ನಾವೆಲ್ಲರೂ ಸಮನ್ವಯ, ಸಾಮರಸ್ಯದಿಂದ ಬಾಳಬೇಕಾದ ಅಗತ್ಯತೆಯನ್ನು ಈ ಸಮ್ಮೇಳನ ಎತ್ತಿ ತೋರಿಸಿದೆ. ಸಾಮಾನ್ಯ ಜನರ ಜತೆ ಬೆರೆತು ನೋವು-ನಲಿವುಗಳನ್ನು ಅರಿತು ನಮ್ಮದೇ ಆದ ಒಂದು ಕಣ್ಣೀರು ಒರೆಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾಯಕ ಮತ್ತು ದಾಸೋಹ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶವನ್ನು ಶರಣರು ನೀಡಿದ್ದಾರೆ. ಸಮ ಸಮಾಜ ನಿರ್ಮಾಣ ಬಯಸುವುದರ ಮೂಲಕ ಇಷ್ಟಲಿಂಗ ಆರಾಧನೆಯೊಂದಿಗೆ ಸಾಮಾಜಿಕ ಸಂವೇದನೆ, ದಲಿತ ಮತ್ತು ಮಹಿಳಾ ಸಂವೇದನೆ, ಸಾಂಸ್ಕೃತಿಕ ಚಿಂತನೆ ಮಾಡಿದರು. ಅನುಭವ ಮಂಟಪ ಸ್ಥಾಪಿಸಿ ಅಭಿವ್ಯಕ್ತಿ-ಸಾಮಾಜಿಕ ಸಾಮರಸ್ಯ, ಸಮನ್ವಯ, ಸೌಹಾರ್ದ, ಎಲ್ಲ ರಂಗದಲ್ಲಿ ಅಭಿವೃದ್ಧಿಗೆ ಒತ್ತು ನೀಡಿ ಸರ್ವೋದಯ ಭಾಷ್ಯ ಬರೆದವರು ಶರಣರು ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಜೀರ್ಣೋದ್ಧಾರವಾಗಲಿ ಉರಿಲಿಂಗ ಪೆದ್ದಿ ಮಠಗಳು: ಉರಿಲಿಂಗ ಪೆದ್ದಿ ಮಠಗಳು ಜೀರ್ಣೋದ್ಧಾರ ಆಗಬೇಕಿದ್ದು, ಸರ್ಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಲಾಖೆಯವರು ಸಹಕಾರ ನೀಡಬೇಕು ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಲಹೆ ನೀಡಿದರು. ಶೈಕ್ಷಣಿಕ ಪ್ರಗತಿಯಲ್ಲೇ ನಾಡಿನ ಪ್ರಗತಿ ಅಡಗಿದೆ. ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಅಭಿವೃದ್ಧಿ ಆಗಬೇಕು, ಸಹಕಾರ- ಸೌಹಾರ್ದ, ಸಾಮರಸ್ಯ ಬೆಸೆದು ಮಾನವೀಯ ಮೌಲ್ಯ ಬಿತ್ತಬೇಕಾಗಿದೆ ಎಂದರು.
ಸರ್ವೋದಯ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಶೀರ್ಷಿಕೆ. ಧರ್ಮ, ಸಾಹಿತ್ಯ, ಸಂಸ್ಕೃತಿ, ಸಮಾಜ ಚಿಂತನೆ ಜತೆಗೆ ಬದುಕು ಕಟ್ಟಿಕೊಡುವ ಮತ್ತು ದಾರಿದೀಪವಾದ ಪದ ಸರ್ವೋದಯ. ಇದು ಕೇವಲ ಪದವಲ್ಲದೆ ಸರ್ವರ ಹಿತ ಕಾಪಾಡುವ ಜೀವನ ಮೌಲ್ಯ. ಹೀಗಾಗಿ ಸರ್ವೋದಯ ಎಂದರೆ ಸಾಮಾನ್ಯ ಅರ್ಥದಲ್ಲಿ ಸರ್ವರ ಉದಯ ಬಯಸುವುದು.
| ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸರ್ವೋದಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರು