ಬಾಳೆಹೊನ್ನೂರು: ಹಿಂದುಗಳು ಸ್ವಲ್ಪವಾದರೂ ಗೋಸೇವೆ ಮಾಡಿ ದೇವತಾರಾಧನೆ ನಡೆಸಿದರೆ ಮಾತ್ರ ದೈವಭಕ್ತಿಗೆ ಮೌಲ್ಯ ಸಿಗಲಿದೆ ಎಂದು ಕೆಮ್ಮಣ್ಣು ಗ್ರಾಮದ ಗೋಸೇವಕಿ ಸರೋಜಮ್ಮ ಹೇಳಿದರು.
ದೇವಗೋಡು ಗ್ರಾಮದ ಕೆಮ್ಮಣ್ಣು ಅಮ್ಮನಹಡ್ಲುವಿನಲ್ಲಿ ತನೂಡಿ ಗಂಗಯ್ಯ ಸಿದ್ಧಾರ್ಥ ಹೆಗ್ಡೆ ಸ್ಮಾರಕದಿಂದ ನಿರ್ಮಾಣಗೊಂಡ ಶ್ರೀ ಮಾತಾ ಭದ್ರಕಾಳಿ ಅಮ್ಮನವರ ಗೋಶಾಲೆ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಗೋಸೇವೆ ಮಾಡಿದರೆ ಜನ್ಮಾಂತರಗಳ ಪಾಪಕರ್ಮಗಳು ನಾಶವಾಗಿ, ಅನಂತ ಪುಣ್ಯಫಲ ದೊರೆಯಲಿದೆ ಎಂದರು.
ಕೃಷಿಕ ನೀರ್ಕಟ್ಟು ಪ್ರಶಾಂತ್ ಮಾತನಾಡಿ, ಗೋವು ಆಧಾರಿತ ಕೃಷಿಯೊಂದೇ ಭಾರತದ ಕೃಷಿಯ ಅಂತಃಸತ್ವ ಹೆಚ್ಚಿಸಬಹುದಾಗಿದೆ. ಕೃಷಿಯಲ್ಲಿ ಗೋಉತ್ಪನ್ನಗಳನ್ನು ಹೆಚ್ಚು ಬಳಸುವುದರಿಂದ ಆರೋಗ್ಯಪೂರಕ ಮತ್ತು ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದರು.
ಗೋಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಮಾತನಾಡಿ, ಬೆಂಗಳೂರಿನ ನಾಗಭೂಷಣ್ ಹಾಗೂ ಕೊಡಗಿನ ಮಾತಂಡ ಗಣೇಶ್ ಸಹಕಾರ ಪಡೆದು ಅಮ್ಮನಹಡ್ಲುವಿನಲ್ಲಿ ನಿರ್ಮಿಸಿದ ಕಾಮಧೇನು ಗೋಶಾಲೆಯ ವಿಸ್ತೃತ ಕಟ್ಟಡವನ್ನು ಹಿರಿಯ ಗೋಸೇವಕಿಯಿಂದ ಉದ್ಘಾಟಿಸಿದ್ದು, ಇಲ್ಲಿ 500 ಗೋವುಗಳನ್ನು ಸಾಕುವ ಉದ್ದೇಶ ಹೊಂದಲಾಗಿದೆ ಎಂದರು.
ಕಾಮಧೇನು ಗೋಶಾಲೆ ವ್ಯವಸ್ಥಾಪಕರಾದ ಸುಮಾ ನಾಗೇಶ್, ಶ್ರೀರಾಮ್ ಆಂಗೀರಸ, ಶಂಕರಕುಡಿಗೆ ಸತೀಶ್, ಶಾಮು, ಲಕ್ಷ್ಮೀನಾರಾಯಣ ಇತರರಿದ್ದರು.