ಸವಣೂರ: ಭೇದ-ಭಾವವನ್ನು ಮರೆತು ಗುರುವಿರಕ್ತರು ಒಂದಾದರೆ ಗುರು ಶಿಷ್ಯರೆಲ್ಲರೂ ಸೇರಿ ಒಳ್ಳೆಯ ಸಮಾಜ ಕಟ್ಟಬಹುದಾಗಿದೆ ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ರೇಣುಕಾಚಾರ್ಯ ನಗರದ ರೇಣುಕ ಮಂದಿರದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಯುಗಮಾನೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ರೇಣುಕಾಚಾರ್ಯರ ಜಯಂತಿ ದಿನವಾದ ಇಂದು ವಿಶ್ವ ಮಹಿಳಾ ದಿನಾಚರಣೆ ಇರುವುದು ದೈವ ಸಂಯೋಗ. ಬಸವಾದಿ ಶರಣರ ಪೂರ್ವದಲ್ಲಿಯೇ ವೀರಶೈವ ಮತ ಪಂಚಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ರೇಣುಕಾದಿ ಪಂಚಾಚಾರ್ಯರಷ್ಟೇ ಬಸವಣ್ಣನವರೂ ಸಮಾಜಕ್ಕೆ ಅವಶ್ಯವಾಗಿದ್ದಾರೆ. ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ ವೀರಶೈವ ಮತದ ಅನುಯಾಯಿಯಾಗಿ ಬಸವಣ್ಣನವರು ಈ ಧರ್ಮವನ್ನು ವಚನದ ಮೂಲಕ ಜಗತ್ತಿಗೆ ತಿಳಿಸಿದರು. ಗುರು ಪರಂಪರೆಯು ಅನಾದಿ ಕಾಲದಿಂದಲೂ ನಡೆದು ಬಂದಿರುವ ಪರಂಪರೆಯಾಗಿದೆ. ಶರಣರು, ಸಾಧು ಸಜ್ಜನರು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ಧರ್ಮವಾಗಿದೆ ಎಂದರು.
ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರೇಮಣಕಟ್ಟಿಯ ಮುರುಘರಾಜೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ರೇಣುಕ ಮಂದಿರ ಸೇವಾ ಸಮಿತಿ ಅಧ್ಯಕ್ಷ ರವತಪ್ಪ ಬಿಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕ ಮಹೇಶ ಸಾಲಿಮಠ, ಪುರಸಭೆ ಸದಸ್ಯರಾದ ಲೀಲಾ ಆರ್. ಗಾಣಿಗೇರ, ಮಹೇಶ ಮುದಗಲ್ಲ, ಶಿವಾನಂದ ಅರಳಿಕಟ್ಟಿ, ಪ್ರಮುಖರಾದ ಆನಂದಯ್ಯ ಕಲ್ಮಠ, ರಾಜಶೇಖರ ಮೆಣಸಿನಕಾಯಿ, ಪುಟ್ಟಯ್ಯ ಕಲ್ಮಠ, ಬಿ.ಎಂ. ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಈರಣ್ಣ ಬಾಳಿಕಾಯಿ, ಸುಭಾಸ ಗಡೆಪ್ಪನವರ, ಪರಶುರಾಮ ಈಳಗೇರ ಇತರರು ಪಾಲ್ಗೊಂಡಿದ್ದರು.
ಸಾಮೂಹಿಕ ವಿವಾಹದಲ್ಲಿ ನಾಲ್ಕು ನವ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು. ಶಿಕ್ಷಕರಾದ ಬಸವರಾಜ ಚಳ್ಳಾಳ, ಪ್ರವೀಣ ಚರಂತಿಮಠ ಹಾಗೂ ಈರಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.