ಮೈಸೂರು: ನಜರ್ಬಾದ್ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂಗವಿಕಲರ ಕ್ರೀಡಾಕೂಟದ ಕಲರವ ಮೇಳೈಸಿತ್ತು. ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದ ವಿಶೇಷ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಂಗವಿಕಲರ ವಿವಿಧ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಅಂಗವಿಕಲರ ಕ್ರೀಡಾಕೂಟ ಆಯೋಜಿಸಲಾಗಿತ್ತು.
100 ಮೀ. ಮತ್ತು 200 ಮೀ. ಓಟದಲ್ಲಿ ದೃಷ್ಟಿಹೀನರು ಮಿಂಚಿದರು. ಡಿಸ್ಕಸ್ ಥ್ರೋನಲ್ಲಿ ದೈಹಿಕ ಅಂಗವಿಕಲರು ಉತ್ಸಾಹದಿಂದ ಭಾಗಿಯಾದರು. ಅಂಗವಿಕಲರ ಜಾವಲಿನ್ ಥ್ರೋ, ಗುಂಡು ಎಸೆತ, ಉದ್ದ ಜಿಗಿತ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನೆರೆದವರನ್ನು ಆಕರ್ಷಿಸಿದವು. ವಿಶೇಷ ಮಕ್ಕಳ ಪಾಲಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ ಮಾತನಾಡಿ, ಅಂಗವಿಕರಲ್ಲಿರುವ ಪ್ರತಿಭೆ ಹೊರಹೊಮ್ಮಿಸಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಇವರಿಗೆ ಅನುಕಂಪ ತೋರದೆ ಅವಕಾಶ ಕಲ್ಪಿಸಬೇಕು ಎಂದರು.
ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜವಾದರೂ ಸ್ಪರ್ಧಿಸುವುದು ಮುಖ್ಯ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಾಮಾನ್ಯವರ್ಗದ ಮಕ್ಕಳಂತೆ ವಿಶೇಷ ಮಕ್ಕಳಿನಲ್ಲೂ ಪ್ರತಿಭೆ ಅಡಗಿರುತ್ತದೆ. ಅಂತಹವರನ್ನು ಗುರುತಿಸಿ ಅವಕಾಶ ಕಲ್ಪಿಸಬೇಕು. ಮಾನವೀಯತೆ ತೋರುವ ಬದಲಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟರೆ ಖಂಡಿತ ಪ್ರತಿಭೆ ಪ್ರದರ್ಶನವಾಗಲಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ, ವಿಶೇಷಚೇತನರ ಒಕ್ಕೂಟದ ಅಧ್ಯಕ್ಷ ಶ್ರೀಧರ್ ದೀಕ್ಷಿತ್ ಮತ್ತಿತರರು ಇದ್ದರು.