ಸಂಡೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಎಂಇಆರ್ಸಿ ಅಧಿಕಾರಿಗಳು ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ತಾಲೂಕಿನ ಕೆರೆಗಳನ್ನು ತುಂಗಭದ್ರಾ ನದಿಯಿಂದ ತುಂಬಿಸಬೇಕು. ಕೆಎಂಇಆರ್ಸಿ ಹಣ ಗಣಿಬಾಧಿತ ಜನರ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಸಂಘಟನೆಗಳ ಪ್ರಮುಖರು ಆಗ್ರಹಿಸಿದರು.

ತಾಲೂಕಿನಲ್ಲಿ 25 ಸಾವಿರ ಗಣಿ ಕಾರ್ಮಿಕರಿದ್ದು, ಅವರ ಜೀವನ ಪುನಶ್ಚೇತಕ್ಕೆ ಕ್ರಮ ವಹಿಸಬೇಕು. ಗ್ರಾಮಗಳಲ್ಲಿ ವಸತಿ ಕಾಲನಿಗಳನ್ನು ಅಭಿವೃದ್ಧಿಪಡಿಸಬೇಕು. ಶಾಲೆ, ಕಾಲೇಜುಗಳನ್ನು ಆರಂಭಿಸುವುದರೊಂದಿಗೆ ಉದ್ಯೋಗ ಸೃಷ್ಟಿಸಬೇಕು. ಗಣಿ, ಉಕ್ಕು ಉದ್ದಿಮೆಗಳು ಸಲ್ಲಿಸಿರುವ ಪರಿಸರ ಆಘಾತಕಾರಿ ಅಧ್ಯಯನ ವರದಿಗಳನ್ನು ಸ್ವತಂತ್ರ ಸಮಿತಿ ರಚಿಸಿ ಪರಿಶೀಲನೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ತೋರಣಗಲ್, ಕುಡತಿನಿ ಭಾಗದಲ್ಲಿರುವ ಬೃಹತ್ ಉದ್ದಿಮೆಗಳು ರಾಸಾಯನಿಕ ತ್ಯಾಜ್ಯವನ್ನು ದರೋಜಿ ಕೆರೆ, ನಾಲೆಗಳಿಗೆ ಬಿಡುತ್ತಿರುವುದರಿಂದ ಜಲಚರಗಳು, ಜಾನುವಾರುಗಳು ಸಾಯುತ್ತಿವೆ. ಇಂತಹ ಉದ್ದಿಮೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬೆಟ್ಟದ ಮೇಲಿನ ರಾಮಘಡ, ಕಮ್ಮತ್ತೂರು ಗ್ರಾಮಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಬಾಲಸುಬ್ರಮಣಿಯನ್, ಕೆಎಂಇಆರ್ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರು ಮಾತನಾಡಿ, ಗಣಿಬಾಧಿತ ಪ್ರದೇಶವಾದ ಬಳ್ಳಾರಿ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ 10 ತಾಲೂಕುಗಳು ಒಳಪಡುತ್ತವೆ. ಆದರೆ, ಸಂಡೂರು ತಾಲೂಕು ತೀರಾ ಹದಗೆಟ್ಟಿದೆ . ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 142 ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಪ್ರಸ್ತಾವನೆ ಬಂದಿದೆ. ಧರ್ಮಾಪುರ ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕಿದೆ ಎಂದರು.
ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಎಸ್.ಮಹ್ಮದ್ ಹ್ಯಾರಿಸ್ ಉಮೇರ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ರೇಣುಕಾಚಾರ್ಯ ಸ್ವಾಮಿ, ಸಮಾಜ ಪರಿವರ್ತನ ಸಮುದಾಯ, ಜನ ಸಂಗ್ರಾಮ ಪರಿಷತ್, ರೈತಸಂಘ, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಮಲ್ಲಿಕಾರ್ಜುನರೆಡ್ಡಿ, ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಮೂಲೆಮನೆ ಈರಣ್ಣ, ಎಂ.ಸತೀಶ್ ಇದ್ದರು.