ದಾವಣಗೆರೆ: ಅಡಕೆ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಸಂತೇಬೆನ್ನೂರು ಠಾಣೆ ಪೊಲೀಸರು, 2 ಲಕ್ಷ ರೂ. ಮೌಲ್ಯದ 5 ಕ್ವಿಂಟಾಲ್ ಅಡಕೆ, ಸಾಗಣೆಗೆ ಬಳಸಿದ್ದ 2 ಲಕ್ಷ ರೂ. ಬೆಲೆಯ ಮಹೀಂದ್ರಾ ಮ್ಯಾಕ್ಷಿಮೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶೆಟ್ಟಿಹಳ್ಳಿ ಗ್ರಾಮವಾಸಿ ಎಚ್.ಎಸ್. ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆ ಕಾರ್ಯ ನಡೆದಿದೆ.
ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದ ಗೋದಾಮಿನಲ್ಲಿ ಇರಿಸಿದ್ದ ಅಡಕೆ ಇತ್ತೀಚೆಗೆ ಕಳವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಚನ್ನಗಿರಿ ಡಿವೈಎಸ್ಪಿ ಡಾ.ಕೆ.ಎಂ.ಸಂತೋಷ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್ಐ ಸಿ.ರೂಪಾ ತೆಂಬದ್ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
—