ಹುಬ್ಬಳ್ಳಿ/ಧಾರವಾಡ: ಇಲ್ಲಿನ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದ ಕಳ್ಳತನ ಆರೋಪಿಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಬ್ಬ ಕಾನ್ಸ್ಟೇಬಲ್ಗೂ ವೈರಸ್ ಹಬ್ಬಿದೆ. ಇದರಿಂದ ವಾಣಿಜ್ಯ ನಗರಿಯ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.
ಹಾರ್ಡ್ವೇರ್ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜೂ. 28ರಂದು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಬಳಿಕ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಕರೊನಾ ಸೋಂಕು ದೃಢಪಟ್ಟಿತ್ತು.
ಆ ಹಿನ್ನೆಲೆಯಲ್ಲಿ ಉತ್ತರ ಉಪ ವಿಭಾಗದ ಎಸಿಪಿ, ಉಪನಗರ ಠಾಣೆ ಇನ್ಸ್ಪೆಕ್ಟರ್, ಪಿಎಸ್ಐ ಸೇರಿ 24 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಎಲ್ಲರ ಗಂಟಲ ದ್ರವ ಪಡೆದು ತಪಾಸಣೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಬ್ಬ
ಕಾನ್ಸ್ಟೇಬಲ್ ವರದಿ ಪಾಸಿಟಿವ್ ಬಂದಿದ್ದು, ಉಳಿದವರ ವರದಿ ನೆಗೆಟಿವ್ ಬಂದಿದೆ. ಇನ್ನೂ ಕೆಲವರ ವರದಿ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಪೊಲೀಸ್ಗೆ: ಕರೊನಾ ಸೇನಾನಿಗಳಾದ ಪೊಲೀಸ್ ಸಿಬ್ಬಂದಿ ಸೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಕರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.
ಧಾರವಾಡ ಶಹರ ಠಾಣೆಯ ಮಹಿಳಾ: ಹೆಡ್ಕಾನಸ್ಟೇಬಲ್ಗೆ ಸೋಂಕು ಬಂದಿದ್ದು, ಈಕೆಯ ಸಹೋದರಿಗೂ ಸೋಂಕು ಹಬ್ಬಿದೆ ಎಂದು ತಿಳಿದುಬಂದಿದೆ. ಮಹಿಳಾ ಪೊಲೀಸ್ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದ ಅವರ ಸಹೋದ್ಯೋಗಿಗಳು ಹಾಗೂ ಠಾಣೆಯ ಸಿಬ್ಬಂದಿಯಲ್ಲಿ ಭಯ ಆವರಿಸಿದೆ. ಮುಂಜಾಗ್ರತೆ ಕ್ರಮವಾಗಿ ಶಹರ ಠಾಣೆ ಆವರಣ ಹಾಗೂ ಒಳಗಡೆ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಇದಕ್ಕೂ ಮೊದಲು ಪಕ್ಕದ ಸಂಚಾರ ಠಾಣೆಯ ಪುರುಷ ಮುಖ್ಯ ಪೇದೆಗೆ ಈಗಾಗಲೇ ಸೋಂಕು ತಗುಲಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಮಹಿಳಾ ಅಧಿಕಾರಿ (ಸಿಡಿಪಿಒ) ಕರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಂಜಾಗ್ರತೆ ಕ್ರಮವಾಗಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ಕೊಲೆ ಆರೋಪಿಗೆ ಕರೊನಾ: ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದ ಹುಬ್ಬಳ್ಳಿ ತಾಲೂಕಿನ ಭಂಡಿವಾಡದ ಕೊಲೆ ಆರೋಪಿಗೆ ಕರೊನಾ ಸೋಂಕು ದೃಢಪಟ್ಟಿ್ಟ್ದು, ಇದರಿಂದ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.
ಕಳೆದ 10 ವರ್ಷಗಳಿಂದ ಪತಿ- ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಶೀಲ ಶಂಕಿಸಿ ಜೂ. 29ರಂದು ಬೆಳಗ್ಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಪೊಲೀಸರು ಆತನನ್ನು ಬಂಧಿಸಿ, ಭಂಡಿವಾಡ ಹೊರ ಠಾಣೆಯಲ್ಲಿ ಇಟ್ಟಿದ್ದರು. ಬಳಿಕ ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಜೂ. 30ರಂದು ಆತನ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ವರದಿ ಬಂದಿದ್ದು, ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಠಾಣೆ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ.
15 ಜನರಿಗೆ ಕ್ವಾರಂಟೈನ್: ಕೊಲೆ ಆರೋಪಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇನ್ಸ್ಪೆಕ್ಟರ್ ರಮೇಶ ಗೋಕಾಕ್, ಪಿಎಸ್ಐ ಸೇರಿ 15 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.