ಕೂಡ್ಲಿಗಿ: ಸರ್ವಜ್ಞ ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಎಂ.ರೇಣುಕಾ ಹೇಳಿದರು.


ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕುಂಬಾರ ಸಂಘದ ವತಿಯಿಂದ ಏರ್ಪಡಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ,ಕವಿ ಸರ್ವಜ್ಞ ಎಂದರು.
ಸರ್ವಜ್ಞ ಕುಂಬಾರ ಸಂಘದ ತಾಲೂಕು ಕಾರ್ಯದರ್ಶಿ ಹಾಗೂ ಶಿಕ್ಷಕ ನಾಗರಾಜ ಕುಂಬಾರ ಮಾತನಾಡಿ, ನಾಡು ಕಂಡ ಮಹಾ ಕವಿ ಸರ್ವಜ್ಞ ಅವರ ವಚನಗಳು ಸರ್ವಕಾಲಿಕ ಸತ್ಯಗಳಾಗಿದ್ದು, ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಲು ಸಹಕಾರಿಯಾಗಿವೆ. ಸರ್ವಜ್ಞರ ವಚನಗಳನ್ನು ಚಿಕ್ಕಮಕ್ಕಳು ಸಹ ಅರ್ಥ ಮಾಡಿಕೊಳ್ಳಬಹುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇವರು ವಚನಗಳನ್ನು ಬರೆಯದ ಕ್ಷೇತ್ರಗಳಿಲ್ಲ. ಎಲ್ಲರ ಬಾಯಲ್ಲೂ ಸರ್ವಜ್ಞರ ವಚನಗಳು ಹರಿದಾಡುತ್ತಿವೆ. ಕವಿ ಸರ್ವಜ್ಞರ ಆದರ್ಶ ತತ್ವ, ವಚನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಇಒ ಪದ್ಮನಾಭ ಕರಣಂ, ನಿವೃತ್ತ ಶಿಕ್ಷಕ ಎ.ಎಂ.ವೀರಯ್ಯ, ಸರ್ವಜ್ಞ ಕುಂಬಾರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇರುದ್ರಪ್ಪ, ಗೌರವಾಧ್ಯಕ್ಷ ಕೆ.ನಾಗರಾಜ, ಖಜಾಂಚಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮಹಾಂತೇಶ್, ಪ್ರಮುಖರಾದ ಮಲ್ಲೇಶಪ್ಪ ಬಡೇಲಡಕು, ಅಂಜಿನಪ್ಪ ಸಿಡೇಗಲ್ಲು, ಸಿದ್ದಪ್ಪ ಹುಲಿಕುಂಟೆ, ಮಾರೇಶ ಕೂಡ್ಲಿಗಿ ಮುಂತಾದವರು ಇದ್ದರು.