ಮುಂಡರಗಿ: ತಾಲೂಕಿನ ಕಕ್ಕೂರ ಭಾಗದ ಕೆಲವು ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಕ್ಕೂರ ಏತ ನೀರಾವರಿ ಯೋಜನೆ ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರ ಅನುದಾನ ಒದಗಿಸಿ ಅನುಮೋದನೆ ನೀಡುವ ಮೂಲಕ ಈ ಭಾಗದ ರೈತರ ಹಲವು ವರ್ಷಗಳ ಬೇಡಿಕೆ ಈಡೇರಿಸಿದೆ.

ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿದ್ದ ಯೋಜನೆ ಪುನಾರಂಭಿಸಬೇಕು ಎಂದು ರೈತರು ಹಲವು ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಇದೀಗ ಸರ್ಕಾರದಿಂದ 7.35 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.
1971-72 ರಲ್ಲಿ ಐದು ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆಯಿಂದ ಕಕ್ಕೂರ ಗ್ರಾಮದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ನದಿ ದಡದಲ್ಲಿ ಕಕ್ಕೂರ ಏತ ನೀರಾವರಿ ಯೋಜನೆ ಜಾರಿಗೆ
ತರಲಾಗಿತ್ತು. ಎರಡು ಹಂತದಲ್ಲಿ ನೀರೆತ್ತುವ ಘಟಕ ಪ್ರಾರಂಭಿಸಿ, ನೀರಾವರಿ ಕಲ್ಪಿಸಲಾಗಿತ್ತು. ಮೊದಲನೇ ಹಂತದ ನೀರೆತ್ತುವ ಘಟಕದಿಂದ ಕಕ್ಕೂರ, ಕಕ್ಕೂರತಾಂಡಾ, ಹೆಸರೂರ ಗ್ರಾಮಗಳಿಗೆ ಮತ್ತು ಎರಡನೇ ಹಂತದ ನೀರೆತ್ತುವ ಘಟಕದಿಂದ ಕಕ್ಕೂರ, ನಾಗರಹಳ್ಳಿ, ರಾಮೇನಹಳ್ಳಿ ಗ್ರಾಮಗಳಿಗೆ ಸೇರಿದ 3 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿತ್ತು. ಆರಂಭದಲ್ಲಿ 15-20 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ ಯೋಜನೆ ನಂತರ ದಿನಗಳಲ್ಲಿ ಸಿಬ್ಬಂದಿ ಕೊರತೆ, ವಿದ್ಯುತ್ ಬಿಲ್ ಪಾವತಿ ಬಾಕಿ ಹಾಗೂ ನಿರ್ವಹಣೆ ಕೊರತೆಯಿಂದ ಯೋಜನೆ ಸ್ಥಗಿತಗೊಂಡಿತ್ತು. ಯೋಜನೆಯ ಪುನರುಜ್ಜೀವನಕ್ಕೆ ಸರ್ಕಾರ 2021 ಜುಲೈ 30ರಂದು ಯೋಜನೆಯ ಮೊದಲನೇ ಹಂತದ ಕಾಮಗಾರಿಗೆ 3.45 ಕೋಟಿ ರೂಪಾಯಿ ಹಾಗೂ ಎರಡನೇ ಹಂತದ ಕಾಮಗಾರಿಗೆ 3.90 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮೊತ್ತ ಒದಗಿಸಿ ಸರ್ಕಾರ ಅನುಮೋದನೆ ನೀಡಿದೆ. ನೀರಾವರಿ ಯೋಜನೆ ಸ್ಥಗಿತಗೊಂಡಿರುವ ಕುರಿತು ‘ವಿಜಯವಾಣಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು.
ನಿಷ್ಕ್ರಿಯಗೊಂಡಿದ್ದ ಕಕ್ಕೂರ ಏತ ನೀರಾವರಿ ಯೋಜನೆ ಪುನರುಜ್ಜೀವನಕ್ಕಾಗಿ ಸರ್ಕಾರ 7.35 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಆ ಭಾಗದ ರೈತರ ಹಲವು ವರ್ಷಗಳ ಬೇಡಿಕೆ ಈಡೇರಿಸುವಂತ ಕೆಲಸ ಮಾಡಿದ್ದೇನೆ.
| ರಾಮಣ್ಣ ಲಮಾಣಿ
ಶಾಸಕ, ಶಿರಹಟ್ಟಿ ವಿಧಾನಸಭೆ ಕ್ಷೇತ್ರ
ನಿಷ್ಕ್ರಿಯ ಸ್ಥಿತಿಯಲ್ಲಿದ್ದ ಕಕ್ಕೂರ ಏತ ನೀರಾವರಿ ಯೋಜನೆ ಪ್ರಾರಂಭಿಸುವಂತೆ ಹಲವು ಬಾರಿ ಹೋರಾಟ ನಡೆಸಲಾಗಿತ್ತು. ಯೋಜನೆ ಪುನರುಜ್ಜೀವನಗೊಳಿಸಲು ಸರ್ಕಾರ ಅನುದಾನ ನೀಡಿದ್ದು ಅಭಿನಂದನಾರ್ಹ. ಇದೇ ರೀತಿ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.
| ವೈ.ಎನ್. ಗೌಡರ
ಅಧ್ಯಕ್ಷ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ಮುಂಡರಗಿ
ರೈತರ ಹಲವು ವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿದೆ. ಇದರಿಂದ ನಮ್ಮ ಭಾಗದ ಜಮೀನುಗಳಿಗೆ ಹೆಚ್ಚಿನ ನೀರಾವರಿ ಸೌಲಭ್ಯ ದೊರೆಯಲಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕು.
| ಸುಭಾಸ ಗುಡಿಮನಿ, ಸುರೇಶ ಹಲವಾಗಲಿ, ಪರಶರಡ್ಡಿ ಗೊಡಚಿಹಳ್ಳಿ
ರೈತರು