ಶೃಂಗೇರಿ: ಹೆಣ್ಣಿಗೆ ಆಕೆಯ ಮೌಲ್ಯಗಳ ಅರಿವು ಮೂಡಿಸುವುದನ್ನು ನಾವು ಮರೆತ್ತಿದ್ದೇವೆ. ಆಕೆಯ ಅಂತರ್ಗತದಲ್ಲಿ ಸೂಕ್ಷ್ಮ, ಸಾಮರ್ಥ್ಯ ಇದ್ದರೂ, ಎಲ್ಲ ಕ್ಷೇತ್ರಗಳಲ್ಲೂ ಆತ್ಮವಿಶ್ವಾಸದಿಂದ ಮುನ್ನಡೆದರೂ ಸಮಾಜದಲ್ಲಿ ಆಕೆಯ ಸ್ಥಾನಮಾನ ಗಟ್ಟಿಗೊಳ್ಳುವಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಜೆಸಿಬಿಎಂ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯೆ ಪುಷ್ಪಾ ಲಕ್ಷ್ಮೀನಾರಾಯಣ್ ತಿಳಿಸಿದರು.
ಜೆಸಿಬಿಎಂ ಕಾಲೇಜು, ಮಹಿಳಾ ಸಬಲೀಕರಣ ಸಮಿತಿ ಹಾಗೂ ಎನ್ಎಸ್ಎಸ್ ಸಹಯೋಗದಲ್ಲಿ ಶನಿವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣಿಗೆ ಸಮಾಜದಲ್ಲಿ ವಿಪುಲ ಅವಕಾಶವಿದ್ದರೂ ಮನೆಯಲ್ಲಿ ಆಕೆಗೆ ಮೊದಲಪ್ರಾಶಸ್ತ್ಯ ನೀಡುವ ಅಗತ್ಯ ಪಾಲಕರ ಮೇಲಿದೆ. ಸಮಾನತೆ, ಸಾಮರಸ್ಯ ವಾತಾವರಣ ಮನೆಯಲ್ಲಿ ಲಭ್ಯವಾದಾಗ ಮಾತ್ರ ಆಕೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣದ ಜತೆಗೆ ಆಕೆಯಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ಬೆಳೆಯಬೇಕಿದೆ. ಶಿಕ್ಷಣದ ನಂತರ ಆಕೆಯ ಸಾಮರ್ಥ್ಯ ಅರ್ಥ ಮಾಡಿಕೊಂಡು ಸಮಾಜದಲ್ಲಿ ಆಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಬೆಳೆಯಬೇಕು. ಒಂದು ಹೆಣ್ಣು ಮತ್ತೊಬ್ಬ ಹೆಣ್ಣಿಗೆ ಪ್ರೋತ್ಸಾಹ ನೀಡುವ ಹಾಗೂ ಆಕೆಯ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆದಾಗ ಮಾತ್ರ ನಾವು ಆಚರಿಸುವ ದಿನಾಚರಣೆಗಳು ಮೌಲ್ಯಯುತವಾಗಿರುತ್ತದೆ ಎಂದರು.
ಮಹಿಳಾ ಸಬಲೀಕರಣ ಸಮಿತಿ ಸಂಚಾಲಕಿ ಕೆ.ಆರ್.ರಶ್ಮಿ ಮಾತನಾಡಿ, ಮಹಿಳೆಯರ ಬದುಕು ಸ್ವಾವಲಂಬನೆಯಾಗಬೇಕಿದ್ದರೆ ಆರ್ಥಿಕ ಸ್ವಾತಂತ್ರ್ಯ ಅತ್ಯಂತ ಪ್ರಮುಖ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಜೀವನವಲ್ಲ. ನಮ್ಮ ಪರಿಮಿತಿ ಅರ್ಥೈಸಿಕೊಂಡು ಸಂಸ್ಕೃತಿಯನ್ನು ಗೌರವಿಸಿ ಪ್ರತಿಯೊಬ್ಬ ಮಹಿಳೆ ಮುನ್ನಡೆಯಬೇಕು ಎಂದು ಹೇಳಿದರು.
ಗಣರಾಜ್ಯೋತ್ಸವದಲ್ಲಿ ರಾಜ್ಯಮಟ್ಟದ ಪಥಸಂಚಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಸ್ಕಂದಾ ಹಾಗೂ ಕಾಲೇಜಿನ ಸ್ವಚ್ಛತಾ ಸಿಬ್ಬಂದಿ ಶಕುಂತಲಾ ಅವರನ್ನು ಸನ್ಮಾನಿಸಲಾಯಿತು.
ವೈದ್ಯೆ ಪೂಜಾ ಭಟ್, ಪ್ರಾಚಾರ್ಯ ಡಾ. ಎಂ.ಸ್ವಾಮಿ, ಎನ್ಎಸ್ಎಸ್ ಅಧಿಕಾರಿಗಳಾದ ಪ್ರಶಾಂತ್, ಲಕ್ಷ್ಮೀನಾರಾಯಣ್, ಸಂತೋಷ್ಕುಮಾರ್, ಶ್ವೇತಾ, ನಾಗಭೂಷಣ್ ಇದ್ದರು.
