ಚಿಕ್ಕಮಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಖಂಡಿಸಿ ವಂದೇ ಮಾತರಂ ಟ್ರಸ್ಟ್ ಸದಸ್ಯರು ಸೋಮವಾರ ರಾತ್ರಿ ನಗರದ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದ ವರೆಗೆ ಕ್ಯಾಂಡಲ್ ಮಾರ್ಚ್ ನಡೆಸಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ನಂತರ ಆಜಾದ್ ಪಾರ್ಕ್ ವೃತದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ದಿವಾಕರ ಭಟ್, ಪಾಕಿಸ್ತಾನ ಹಿಂದಿನಿಂದಲೂ ಉಗ್ರ ಚಟುವಟಿಕೆಯನ್ನು ಬೆಂಬಲಿಸಿಕೊಂಡೇ ಬಂದಿದೆ. ಉಗ್ರರಿಗೆ ಕುಮಕ್ಕು ನೀಡುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಪಾಕಿಸ್ತಾನದ ಸರ್ಕಾರ ಇರುವಂತೆ ಭಾಸವಾಗುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ಬ್ರದರ್ ಎಂದು ಹೇಳಿದ ಪ್ರತಿಫಲವೇ ಇಂದು ಉಗ್ರ ದಾಳಿ ನಡೆದಿದೆ. ಭಟ್ಕಳ, ಶಿವಮೊಗ್ಗದಲ್ಲಿ ಗಲಭೆ ನಡೆಸುವವರು ಹಾಗೂ ಧರ್ಮ ವಿರೋಧಿಗಳಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಯುವಕರಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ಬಾಲಿವುಡ್ ಖಾನ್ ಗಳು ತಾವು ಹಿಂದುಸ್ತಾನಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಿಂಬದಿಂದ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ. ಮುಸ್ಲಿಮರು ಹಿಂದುಗಳ ಜೊತೆ ವ್ಯವಹಾರ ನಡೆಸುವುದಿಲ್ಲ ಬದಲಿಗೆ ತಮ್ಮ ಸಮುದಾಯದವರೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ಆದರೆ ಹಿಂದುಗಳು ಎಲ್ಲದಕ್ಕೂ ಮುಸ್ಲಿಮರ ಬಳಿ ಹೋಗುವ ಸನ್ನಿವೇಶವಿದೆ. ಇದು ಮೊದಲು ಬದಲಾಗಬೇಕು ಎಂದು ಹೇಳಿದರು.
ಭಾರತೀಯರು ಸರ್ವೇ ಜನ ಸುಖಿನೋಭವಂತು ಎನ್ನುತ್ತಾರೆ. ಆದರೆ ಪಾಕಿಸ್ತಾನೀಯರು ಉಸಿರು ನಿಲ್ಲಿಸುವ ಮಾತನ್ನು ಆಡುತ್ತಾರೆ. ಇದು ಅವರ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಒಂದೇ ಮಾತರಂ ಟ್ರಸ್ಟ್ ಪ್ರೀತೀಶ್, ಬಿಜೆಪಿ ಮುಖಂಡ ಪ್ರದೀಪ್ ಮತ್ತಿತರರಿದ್ದರು.