ತುಮಕೂರು: ಕರ್ನಾಟಕ ಪರೀಾ ಪ್ರಾಧಿಕಾರದ(ಕೆಇಎ) ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಜೆಡಿಎಸ್ ಮುಖಂಡ ತಿಮ್ಮನಹಳ್ಳಿ ಶ್ರೀಹರ್ಷ(40) ಪ್ರಕರಣದ ಕಿಂಗ್ಪಿನ್ ಎನ್ನಲಾಗಿದ್ದು, ಸರ್ಕಾರಿ ಕೋಟಾದಡಿಯ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಶ್ರೀಹರ್ಷನ ಸಹಚರರಾದ ಕಡೂರು ನಿವಾಸಿ ಪುರುಷೋತ್ತಮ(24), ಶಶಿಕುಮಾರ(34), ಪುನೀತ(27), ಪ್ರಕಾಶ(42) ಕನಕಪುರದ ಸಾತನೂರು ನಿವಾಸಿ ರವಿಶಂಕರ್(56), ಶೇಷಾದ್ರಿಪುರ ನಿವಾಸಿ ಆರ್.ಜಿ. ತಿಲಕ್(60), ಬಿಟಿಎಂ ಲೇಔಟ್ ನಿವಾಸಿಗಳಾದ ದಿಲ್ಷಾದ್ ಆಲಂ(33), ನೌಷದ್ ಆಲಂ (42) ಮತ್ತು ಕೆಇಎ ನೌಕರ ಯಶವಂತಪುರದ ಅವಿನಾಶ್(36) ಬಂಧಿತರು.
ಆರೋಪಿಗಳು ಸರ್ಕಾರಿ ಕೋಟದ ಸೀಟುಗಳನ್ನು ಅಕ್ರಮವಾಗಿ ಬ್ಲಾಕ್ ಮಾಡಿಸಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಆಕಾಶ್ ಇನ್ಸ್ಟ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿ ಕೆಇಎ ಅಧಿಕಾರಿಗಳು ನ.13 ರಂದು ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ 52 ಅಭ್ಯರ್ಥಿಗಳ ಲಾಗಿನ್ ಹೆಸರು ಮತ್ತು ಪಾಸ್ವರ್ಡ್ ಪಡೆದು ಸೀಟ್ಗಳನ್ನು ಬ್ಲಾಕ್ ಮಾಡಿರುವುದು ತಿಳಿದುಬಂದಿದ್ದು, ಐಪಿ ವಿಳಾಸದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಸಂಜಯನಗರದ ಡಾರ್ಲಸ್ ಕಾಲನಿಯಲ್ಲಿ ಜಾಬ್ ಕನ್ಸಲ್ಟೆಂಟ್
ಹೊಂದಿದ್ದ ತಿಮ್ಮನಹಳ್ಳಿಯ ಶ್ರೀಹರ್ಷ ಪ್ರಕರಣದ ಸೂತ್ರದಾರ ಎನ್ನಲಾಗಿದ್ದು, ಕೆಇಎ ನೌಕರ ಅವಿನಾಶ್ ನೆರವಿನೊಂದಿಗೆ ಮೂರನೇ ಸುತ್ತಿಗೆ ಕೌನ್ಸೆಲಿಂಗ್ ಹಾಜರಾಗದ ಅಭ್ಯರ್ಥಿಗಳ ಮಾಹಿತಿ ಪಡೆದು ದಂಧೆ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.