ತುರುವೇಕೆರೆ: ತಾಲೂಕಿನ ಗೋಣಿತುಮಕೂರಿನಲ್ಲಿ ಬುಧವಾರ ಕೆಎಸ್ಆರ್ಟಿಸಿ ಬಸ್ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿಸವಾರ ಗಾಯಗೊಂಡಿದ್ದಾನೆ. ತಾಲೂಕಿನ ದಬ್ಬೇಟ್ಟ ಹೋಬಳಿಯ ಹಿಂಡುಮಾರನಹಳ್ಳಿಯ ನಿವಾಸಿ ದೀಪಕ್(32)ಮೃತ. ಹಿಂಬದಿಸವಾರ ಅದೇ ಗ್ರಾಮದ ಪುಟ್ಟಸ್ವಾಮಿ(35) ಗಾಯಗೊಂಡಿದ್ದಾರೆ. ಇಬ್ಬರೂ ಪಟ್ಟಣದ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಗ್ರಾಮಕ್ಕೆ ಹಿಂತಿರುಗುವಾಗ ಗೋಣಿತುಮಕೂರು ಗ್ರಾಮದ ದೇವಸ್ಥಾನದ ಸಮೀಪ ದಬ್ಬೇಟ್ಟದಿಂದ ತುರುವೇಕೆರೆ ಕಡೆಗೆ ಬರುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ತೀವ್ರ ಗಾಯಗೊಂಡಿದ್ದ ದೀಪಕ್ ಅವರನ್ನು ತಕ್ಷಣ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹಿಂಬದಿಯ ಸವಾರ ಪಟ್ಟಸ್ವಾಮಿಗೆ ಗಂಭೀರ ಗಾಯಗಳಾಗಿದ್ದರಿಂದ ಐಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ದೀಪಕ್ ವಿವಾಹವಾಗಿ ಕೇವಲ ಒಂದು ವರ್ಷವಷ್ಟೇ ಕಳೆದಿದ್ದು, ಮೃತರ ಸಂಬಂಧಿಕರ ರೋಧನ ಮುಟ್ಟಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಗ್ಲಾಸ್ ಒಡೆದು 15 ಲಕ್ಷ ರೂ. ಕಳವು
ಗುಬ್ಬಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 15 ಲಕ್ಷ ರೂ. ದೋಚಿದ್ದಾರೆ. ತಾಲೂಕಿನ ಕಡಬ ಹೋಬಳಿ ಡಿ.ರಾಂಪುರದ ಕೊಬ್ಬರಿ ವರ್ತಕ ಶಿವರಾಜು ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಕಾರ್ಯನಿಮಿತ್ತ ಪಟ್ಟಣದ ಎಪಿಎಂಸಿ ಕಚೇರಿಗೆ ತೆರಳಿದ್ದ ವೇಳೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ದೋಚಿದ್ದಾರೆ.
ಕಚೇರಿಯ ಒಳಗೆ ಹೋಗಿ ಬಂದು ನೋಡಿದಾಗ ಟನೆ ತಿಳಿದಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.