ಇಂಡಿ: ತಾಲೂಕಿನಲ್ಲಿ ಕಳೆದ ಮಾರ್ಚ್ನಿಂದ ಮೇ 31 ರವರೆಗೆ ಕೆರೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮತ್ತು ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈಗ ಮೇ 31 ರವರೆಗೆ ಮಾತ್ರ ಟ್ಯಾಂಕರ್ ನೀರು ಪೂರೈಸುತ್ತಿದ್ದು, ಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಅತಿ ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಶುಕ್ರವಾರ ಕುಡಿಯುವ ನೀರಿನ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಮತ್ತು ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಜೂ.15 ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಮಳೆಯ ಅವಲಂಬನೆ ಮತ್ತು ನೀರಿನ ಲಭ್ಯತೆಯ ಆಧಾರದ ಮೇಲೆ ಜೂ.15 ರಿಂದ ಟ್ಯಾಂಕರ್ ನೀರು ಪೂರೈಕೆ ಬಂದ್ ಮಾಡಲಾಗುವುದು. ಅದಲ್ಲದೆ ಶಾಲಾ- ಕಾಲೇಜು ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು.
ಪಿಡಿಒ ಸಿ.ಜಿ.ಪಾರೆ ಮಾತನಾಡಿ, ಒಮ್ಮೆಲೆ ನೀರು ಪೂರೈಕೆ ಸ್ಥಗಿತ ಮಾಡಿದರೆ ಗ್ರಾಮಸ್ಥರು ಸಮಸ್ಯೆ ಮಾಡುತ್ತಾರೆ. ಜೂ.30 ರವರೆಗೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಮಂಜುಳಾ ನಾಯಕ, ತಾಪಂ ಇಒ ನೀಲಗಂಗಾ ಬಬಲಾದ ಮಾತನಾಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ, ಹೆಸ್ಕಾಂ ಅಧಿಕಾರಿ ಆರ್.ಎಸ್. ಮೆಂಡೆಗಾರ, ಗ್ರಾಮೀಣ ಕುಡಿಯುವ ನೀರಿನ ಎಇಇ ಸುಭಾಷ ರುದ್ರವಾಡಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಬಿ.ಎಚ್. ಕನ್ನೂರ, ಪಿಡಿಒ ಜಬ್ಬಾರ, ಬಬಲಾದ, ಎಸ್.ಆರ್. ಮುಜಗೊಂಡ, ವೀಣಾ ಕೊಳುರಗಿ, ಎಚ್.ಎಚ್. ಗುನ್ನಾಪುರ ಇತರರಿದ್ದರು.