ಇಂಡಿ: ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಉದ್ಭವಿಸಬಹುದೆಂದು ಗೊತ್ತಾದ ತಕ್ಷಣ ಟ್ಯಾಂಕರ್ಗೆ ಬೇಡಿಕೆ ಇಟ್ಟು ಪ್ರಪೋಜಲ್ ಕಳುಹಿಸಿಕೊಡಿ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಆಡಳಿತಸೌಧ ಸಭಾಭವನದಲ್ಲಿ ನಡೆದ ಟಾಸ್ಕ್ೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಬಹುತೇಕ ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕುಡಿಯಲು ನೀರು ಕೊಡುವುದು ಪುಣ್ಯದ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿಮ್ಮ ಬಾವಿ-ಕೊಳವೆ ಬಾವಿಯಲ್ಲಿ ನೀರಿದ್ದರೆ ಬೇಸಿಗೆ ಮುಗಿಯುವವರೆಗೂ ನಿಮ್ಮೂರಿನ ಜನತೆಗೆ ಕುಡಿಯುವ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಗ್ರಾಮದಿಂದ ದೂರವಿದ್ದರೆ ಟ್ಯಾಂಕರ್ಗಳಿಗಾದರೂ ನೀರು ತುಂಬಿಸಿಕೊಡಿ ಎಂದು ಗ್ರಾಮೀಣ ಭಾಗದ ಜನರಿಗೆ ಎಸಿ ಅಬೀದ್ ಗದ್ಯಾಳ ಮನವಿ ಮಾಡಿದರು.
ಈಗಾಗಲೆ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಹೆಚ್ಚಿನ ಟ್ಯಾಂಕರ್ಗಳಿಗೆ ಬೇಡಿಕೆ ಬರುತ್ತಿದೆ. ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸ್ಥಾನಿಕ ಚೌಕಾಶಿ ಮಾಡಿ ಅವಶ್ಯವಿದ್ದಲ್ಲಿ ಪ್ರಪೋಜಲ್ ಕಳುಹಿಸಿ ಎಂದರು.
ತಹಸೀಲ್ದಾರ್ ಮಂಜುಳಾ ನಾಯಿಕ, ತಾಪಂ ಇಒ ನೀಲಾಂಬಿಕೆ ಭುಯ್ಯರ, ಎಸ್.ಆರ್. ರುದ್ರವಾಡಿ, ಎಚ್.ಎಸ್. ಪಾಟೀಲ, ಮಹಾದೇವಪ್ಪ ಏವೂರ, ವೀಣಾ ಕೊಳೂರಗಿ, ಎಸ್.ಆರ್. ಮುಜಗೊಂಡ, ಎಚ್.ಎಸ್. ಗುನ್ನಾಪೂರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಇದ್ದರು.